ಭಾವುಕತೆಯ ಬೀದಿಯಲಿ ಸನಿಹ ಬಂದರೂ
ದೂರವೇ ಸರಿದಿರ್ಪ ನಿತ್ಯ ಮಾಯೆಯ ತರ್ಕ
ತುಕ್ಕಾಗುತ ಬಂದು ಅಂಶಗಳ ಮಣ್ಣುಮಾಡಿ
ಉಳಿದಿರುವ ನಿರ್ಬಲತೆಯ ಮಾತಂಗನಿಗೊಪ್ಪಿಸಿ
ಜಢ ದೇಹವ ಬೇಯಿಸಿ ಬೂದಿ ಮಾಡುತಲಿರುವ
ಬಹುತೇಕ ಭಾವಗಳು ಬಂಜೆಯಾಗುತಲಿವೆ.
ಹೀಗೊಮ್ಮೆ ನನ್ನೊಡಲು ಅಕ್ಕರೆಯ ದನಿತೂರಿ
ಉಪಾಖ್ಯಾನದ ಸಿರಿ ಸಂತಸದಲಿ ಹಾದಿ ಮರೆತಿತ್ತು,
ತತ್ತ್ವ ಗಡಿಯೊಳಗೆ ಕೈ ಚಾಚಿ ಮೈ ಹರಡಿ
ವಿಶಾಲ ವಿಹಿತಗಳ ಪಳೆಯುಳಿಕೆ ಮೌಲ್ಯದಲಿ
ಮಾತಾಡಿ ಮನಕಸಿದು ಹಸಿಗೂಸಿಗೆಂಬಂತೆ
ಹೊಸ ಕಥೆಯ ರಚಿಸಿತ್ತು ಬಾಳ ವಿಸ್ರಂಭದಲಿ.
ಜಾತಕಗಳ ರಚಿಸಿರ್ಪ ಗ್ರಹ ನವದ ಸಂತೆ
ನಿಟ್ಟು ಅಷ್ಟದಿ ಅಳೆಯುತಿರೆ ದಿಸೆಯ
ಬಾಳಿನಾಶಭ್ರೂಣಗಳ ಹೊಸ ಹುಟ್ಟು ಹೊಸ ಆಶೆ
ಅನಿಕೇತ ಮಮತೆಗಳ ಹೊಕ್ಕಳಾಗುತ ಬಂದು
ದಿನಕೆ ದಿನಗಳ ಬಳಿದು ಮನ-ಮೌನಗಳ ಬಿತ್ತಿ
ಫಲವತ್ತು ಪೈರುಗಳ ಬೆಳೆಸಲ್ಹಂಬಲಿಸುತಿದೆ.
ದೇವನೇ ಆತ್ಮ, ಪರಮಾತ್ಮ, ಪರಮ ಪಿತೃ
ದೇವನಿಗೇ ಅರ್ಪಿತ ಸರ್ವರ ಪಿಂಡ.
ಮಾನವನ ವಿಶೇಷ ದೇವನ - ಬಹು ಭಾಷಾ, ಬಹು ವಿಧ
ನಾಮಕ್ಕೂ ಕ್ಷುಲ್ಲಕವಾದುದು ನಮ್ಮದೆಂಬ ಹೆಮ್ಮೆ
ಭಾವುಕತೆಗೆಲ್ಲಿ ಬೇಲಿ? ದೇವನೇ ಅದರಲ್ಲಿ ಬಂಧಿ
ಶ್ರೀಮಂತವೀ ಜಗತ್ತು ಬಾಳ ಛಾಯೆಗಳಲ್ಲಿ!
No comments:
Post a Comment