Friday, June 19, 2009

ಎಲ್ಲಿದೆ ದೂರದೃಷ್ಟಿ?

ಕುಲವು ಕಳಶವಾಗಿ ಜಾತಿ ಜ್ಯೋತಿಯಾದಾಗ
ಉರಿವ ಎಲ್ಲಾ ಹೋಮ ಧೂಮಕ್ಕೂ ಬೆಲೆಯಾವುದು?
ಮನವು ಮುಚ್ಚಿರಲು ಹೃದಯ ಅಡಗಿರಲು
ಆಡುವ ಎಲ್ಲಾ ಮಾತಿನ ಓಘಕ್ಕೆ ಅರ್ಥ ಯಾವುದು?

ಕಾಲ-ದೇಶಗಳ ಬದಲಿಸಿದಂದು, ವಿಚಾರಯಾಗಕ್ಕೆ
ತಾನಾಗಿಯೆ ಅರಿಯದಂತೆ ಹೊಸ ನಿಟ್ಟು ಬರುವುದೆ?
ಆಡಂಬರದಿ ಅಂಬರ ಮಳೆಯ ಹೆಸರ ಬರೆಯಲು
ಈ ಭುವಿಯ ಹಾಸಿಗೆಗೆ ಹಸಿರು ಪಚ್ಚೆ ಮುಚ್ಚುವುದೆ?

ನಾಟಕೀಯತೆಯ ತೆಳು ಪರದೆಯ ಹಿಂದೆ ಬೆಳೆವ ಸ್ನೇಹಕ್ಕೆ
ಆಪ್ತತೆಯ ಆಜನ್ಮ ಋಣಾನುಬಂಧ ಬೆಳೆವುದೆ?
ಕಾಮಕ್ಕಾಗಿಯೇ ಕುಳಿತ ಪ್ರೀತಿಯಾತುರತೆಗೆ
ಒಮ್ಮೆಯಾದರೂ ಪರಸ್ಪರತೆಯ ಭಾವ ಬರಬಹುದೆ?

ಬುಧ್ಧಿಯನೆಲ್ಲ ಮಾನವರಿಗೆ ಕೊಟ್ಟ ಭಗವಂತ
ಲಗಾಮು ಮಾಯಮಾಡಿ - ನೀವೆ ಸೃಷ್ಟಿಸಿ ಎನಲು
ಹಾದಿಯುದ್ದಕ್ಕೂ ಹಾದಿ ಕವಣೆಗಳಿದ್ದಲ್ಲಿ
ಎಲ್ಲಿ ಬಂದೀತು ಎಮಗೆ ದೂರದೃಷ್ಟಿ?

No comments: