ನೋವಿನಾಳಗಳಲ್ಲೂ ನಲಿವಾಗಿ ಮೂಡುವ
ನಿನ್ನ ನೆನಪಿನ ಸಂತಸವನ್ನ ಹೇಗೆ ಮರೆಯಲಿ ಹೇಳು,
ಮನಸ ಮೂಲೆಗಳಲ್ಲಿ ಮಧುರ ಸ್ಪರ್ಶವಾಗಿಹ
ನಿನ್ನೊಡನಾಟದ ಸಂಗವನ್ನ ಕಳಚುವುದಾದರೂ ಹೇಗೆ?
ಇಲ್ಲವೆಂದಲ್ಲ - ಇದ್ದಂತೆಯೂ ಇಲ್ಲ ನಿನ್ನ ಸನಿಹ
ಸವಿಯಬಲ್ಲ, ಅಪ್ಪದಾಗದ ನೆನಪ ನಭವಾಗಿರುವೆ ನೀನು
ನಿನ್ನಲ್ಲೆ ಕುಳಿತು ತಂಗುವ ಬಯಕೆಗಳಿವೆ ಇಹೆಗೆ
ಅಲ್ಲಲ್ಲೆ ತಪ್ಪಿಹೋಗುತಿವೆ, ಮಧುರದಲ್ಲೆ ದೂರವಾಗಹತ್ತಿದೆ.
ಊಹೆಯಾಗಿ ಬಿಟ್ಟೆಯಾ, ಸ್ಪರ್ಶವಾಗದೆ ನೀನು
ಒಲವಿತ್ತು, ಅದರ ಬಲವಿತ್ತು ನಮ್ಮಲ್ಲಿ ಎಂದರೆ ನಂಬುವರಾರು?
ನಂಬದಿದ್ದರೇನಂತೆ ಬಿಡು, ಈ ಜನರಿಗೆ ಸದಾ ಶಂಕೆ
ನಮಗೆ ಗೊತ್ತು ನಮ್ಮಲ್ಲಿ ಪ್ರಫುಲ್ಲವಾದದ್ದೇನೆಂದು.
ಹೃದಯದಲ್ಲೇನಿದೆಯೆಂದು ಕದ್ದು ಓದುವವರಿಲ್ಲ
ಕತ್ತಲೆಯಲೂ ಕಾಣ್ಬಲ್ಲರು ಅನುಭವ ಬಲ್ಲ ಬಲ್ಲಿದರು,
ಅಂತರಾಳದಲಿ ನಿನ್ನ ಬಗ್ಗೆ ನನಗೆ ಸದಾ ವಸಂತ
ಮಾಸವೇನಾದರೂ ಮಾಸಲೊಲ್ಲದು ನಮ್ಮ ಅಸೇಚನ ಕ್ಷಣಗಳು.
ಏನು ಮಾಡಲಿ ಹೇಳು? - ನೆನಪಿಗೆ ನಲಿವುಂಟು - ನೋವೂ ಉಂಟು
ಈ ಕ್ಷಣದಿ ಹೀಗಿದ್ದರೆ, ಸದಾ ಹೀಗಿರುವುದೆಂದಲ್ಲ,
ಕಾಣದೇ ಕುಳಿತ ಆ ದೇವರನ್ನೇ ನಂಬುವಾಗ
ಕಂಡು - ಕಣ್ತಪ್ಪಿ ಹೋಗಿರುವೆ ನೀನು - ನಿನ್ನ ಮರಯಲಾರೆ.
3 comments:
ತುಂಬಾ ಸುಂದರ ಕವನ.
ಮನ ಕರಗಿಸುವ ವಿಷಾದ- ಮುದಗೊಳಿಸುವ ಪದ ವೈಭವ.
ಕಾಣದೇ ಕುಳಿತ ಆ ದೇವರನ್ನೇ ನಂಬುವಾಗ
ಕಂಡು - ಕಣ್ತಪ್ಪಿ ಹೋಗಿರುವೆ ನೀನು - ನಿನ್ನ ಮರಯಲಾರೆ.
-very nice.
ಊಹೆಯಾಗಿ ಬಿಟ್ಟೆಯಾ, ಸ್ಪರ್ಶವಾಗಿದೆ ನೀನು
-ಇಲ್ಲೇನಾದರೂ ಅಚ್ಚಿನ (ಟೈಪಿನ:-)) ದೋಷವಿದೆಯೇ?
ನೀವು ಹೇಳಿರುವುದು ಸರಿ. ಅಚ್ಚಿನ ದೋಷ್ವನ ತಿದ್ದಿ ಪುನಃ ಪಬ್ಲಿಷ್ ಮಾಡಿದ್ದೇನೆ.
ಕವಿಯ ಮನದ ಸ್ಪರ್ಶವಾಗಿರುವ ಅವರ ಗೆಳತಿ ಈ ಕವಿತೆಯನ್ನು ಓದಿ ಕಣ್ತುಂಬಿಸಿಕೊಂಡಿರಬೇಕು!! ಎಲ್ಲ ನಾವಂದುಕೊಂಡಂತೆ ಆಗುವುದಿಲ್ಲ ಎಂದಾಕ್ಷಣ ಮನಸ್ಸಿನ ಭಾವನೆಗಳನ್ನು ಬದಲಿಸಲು ಹೇಗೆ ಸಾಧ್ಯ? ಆ ಭಾವನೆಗಳು ನಮಗರಿವಿಲ್ಲದಂತೆ ಆಗಾಗ ನಮ್ಮನ್ನು ಆವರಿಸಿಕೊಳ್ಳುತ್ತದೆ. ಅಲ್ಲವೇ?
Post a Comment