ಓ ಆತ್ಮೀಯ! ಭೂತವಾಗುತಿದೆ ಬಾಳು!
ಪವಮಾನವೆದ್ದು - ಪವಡಿಕೆಯ ಹೋಳಿನಲಿ
ಕನಸಿಗೊಂದಾದಂತೆ ನನಸಿನಾ ಸೀಳಿನಲಿ
ಅನಿರ್ಭರದಿ ಪ್ರಸವಿಸಿದಳು ಪಯಸ್ವಿನಿ.
ವಿಧಾಯಕನಿಗಿಂದು ವಿಧಿ ಬದಲಿಸಿದೆ
ತಲ್ಲಣದ ತೃಷೆಯೆದ್ದು ಉಸಿರು ಬಿಸಿಯಾಗಿದೆ
ಹಿಂದಿನಾ ಅರೆಬತ್ತಲೆ ನೆನಪ ಸುಳಿಯೊಡೆದು
ದಾಹಕ್ಕೆ ಲವಣದಾ ಜಲವ ಸುರಿಸುತಲಿದೆ.
ಎಲ್ಲಿ ಉದ್ಭವಿಸಲಿ ಹೇಳು ನಾನೀಗ
ಭೂಮಿಯೆಲ್ಲವು ಮುಚ್ಚಿದೆ ಜಲರಾಶಿಯಲಿ
ನೀಲಿಯಾಕಾಶದ ನಡುವೆ, ಎದೆ ಬಿಚ್ಚಿ ಕುಳಿತು
ಎಲ್ಲ ಕೇಳಿರೆಂದು ಕಿರುಚಿ ಬಿಡಲೆ - ಹೇಳು?
ನನ್ನದೇ ಆಸ್ತಿಯೆಂದು ಕಾಪಾಡಿ ಸಲಹಿದಾ
ಎದೆ ಸಂಚುಗಳಾ ಹೆಂಚು ಹಾರಿ ಹೋಗಿರುವಾಗ
ನಿಜ ತೋರುವಂತದಲ್ಲ, ಇದು ನಿಜವಲ್ಲವೆಂಬ
ಬಾಲ ವಿನೋದದ ಮಾತಿನ ಮಳೆಗರೆಯಲೆ?
ನಿನ್ನ ಸಖ ನಾನೆಂದ ನೀ ಎಲ್ಲಿ ಬಚ್ಚಿರುವೆ ಹೇಳು
ನಿನ್ನ ಬಗ್ಗೆ ಯಾರಿಗೂ ಹೇಳಿಲ್ಲ ಇದುವರೆಗೆ
ಇವನದೆಲ್ಲವು ಭಾವನೆಯೆಂದು ಅಳಿದು ನಕ್ಕಾರು ಜನರು
ದಕ್ಕುವಂತವನಾಗು ನೀನು, ಭಗವಂತನಂತಲ್ಲದೆ!
No comments:
Post a Comment