Saturday, July 16, 2011

ಅರ್ಹತೆ

ಮಧುವ ಸವಿದೊಡನೆ ಸಿಹಿಯ ಅರಿವಾಗುವುದೆ?
ಪ್ರೀತಿಯ ಅನುಭವಿಸಿದೊಡನೆ ಜೀವ ಸುಖಿಸುವುದೆ?
ಭೂಮಿಯ ಮೇಲೆ ನಿಂತೊಡೆ ಆಗಸದ ಎತ್ತರ ಅರಿವಾಗಿ
ಬಾಗಿ ನಡೆಯುವ ಸಂಯಮ ಉದಿಸುವುದೆ - ಹೇಳು?

ಹೌದು, ಸಂಬಂಧದ ಅಸಂಬದ್ಧತೆ ಇದೆ ಇಲ್ಲಿ,
ಮುಸುಕ ಎಳೆದು ಮರೆಮಾಚುವ ಮರೀಚಿಕೆಯ ಅನುಭವದಲ್ಲಿ;
ನಿಜ ಹೇಳಬೇಕೆಂದೇನಿಲ್ಲ, ಸುಳ್ಳ ಹೇಳುವ ಅಗತ್ಯವಿಲ್ಲ
ಜಗವ ನಿಗೂಢದಲ್ಲಿ ಕಲ್ಪಿಸಿ ಹೂವ ಅರಳಿಸಬಹುದಲ್ಲ!

ಧರ್ಮದ ಬೇಲಿಯಾಚೆ ನಿಂತ ಮಾನವೀಯತೆಯ ಮೆರಗು
ಒಳಬಂದು ಸಂತೈಸುತಿರೆ ಜೀವವ, ಅದಕ್ಕೆ ಲೆಕ್ಕವಿದೆಯೆ?
ಏನ ಹೇಳಿದರು ಅದಕ್ಕೊಂದು ಅರ್ಥ ಹುಡುಕುವ ಮತಿಗೆ
ಪ್ರಶ್ನೆಯ ಬಿಟ್ಟು ಉತ್ತರ ಹುಡುಕುವ ಅರ್ಹತೆಯಿದೆಯೆ - ಹೇಳು?

ವಿರಹವೇ ಮೊದಲಾದರೆ ಪ್ರೀತಿಗೆ ಪದ ಕಲ್ಪಿಸುವರು ಯಾರು?
ಮತಿಯ ವಿವೇಕದ ಮೋಹದಲ್ಲಿ ಹೃದಯವ ಬಂಧಿಸಿಬಿಟ್ಟರೆ -
ಉಳಿವಿಗೆ ಬರಹೇಳುವ ಬಲವೆಲ್ಲಿದೆ ಎಂಬುದ ಹುಡುಕಿದರೆ
ಮೌನದಲ್ಲಿ ಸುಖಿಸುವ ಅರ್ಹತೆ ಕೈತಪ್ಪಿ ಹೋಗುವುದ ಕಲ್ಪಿಸಲಾರೆ!

1 comment:

Anonymous said...

ಆರ್ಹತೆ ತಪ್ಪಿಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಕೆಂದರೆ ಆ ಮೌನದ ಸುಖ ಯಾವ ಭಾವನೆಗಳಿಗೂ ಮೀರಿದ್ದು, ಬಹಳ ಪಾವಿತ್ರ್ಯವಾದದ್ದು. ಭಕ್ತ ಮತ್ತು ಭಕ್ತಪ್ರಿಯನ ಸಂಭಂದದಂತೆ. ಜೊತೆಗೆ, ಮತಿಯೊಂದಿಗಿನ ಸಂತೋಷ ಜೀವನದಲ್ಲಿ ಬಹಳ ಮುಖ್ಯ. ವಿರಹದ ಪದಗಳನ್ನು ಸರಸ ಪದಗಳನ್ನಾಗಿ ಬದಲಿಸಿ ನೋಡಿದರೆ ಖಂಡಿತ ಹೃದಯಗಳ ಬಂಧನ ಸಾಧ್ಯ. ನಿತ್ಯದಲ್ಲಿ ಎಲ್ಲವನ್ನು ನಿಭಾಯಿಸುವ ಹೃದಯವನ್ನು ಪ್ರೀತಿಸುವುದು ಬಹಳ ಮುಖ್ಯ. ಆ ಪ್ರೀತಿ ಎಂದೆಂದಿಗೂ ಜೊತೆಯಲ್ಲಿಯೇ ಇರುತ್ತದೆ ಮತ್ತು ಕ್ರಮೇಣ ಸಂತೋಷ ಮತ್ತು ತೃಪ್ತಿಯನ್ನು ಕೊಡುತ್ತದೆ. ಮೌನದಲ್ಲಿ ಕಾಣುವ ಸುಖ ನೀವೇ ಹೇಳಿದ ಮರೀಚಿಕೆಯಂತೆ ಆಗದೆ ಜೀವನದ ಸಂತೋಷವನ್ನು ತರುವ ಹಾರೈಕೆಯಾಗಲಿ ಎನ್ನುವುದು ನನ್ನ ಆಶಯ.