ಕುಂಕುಮದ ಕಂದರಿನ
ಕೆಂದಾವರೆಯ ಕಾವ್ಯದಿ
ಕಾವೇರದು ಆ
ರಂಗಿನಾ ಬುಗ್ಗೆಯಂತೆ,
ಅಂತರಂಗದ ರಂಗು
ಇಂಗಿಸುವಾ ಸಿಂಧೂರ
ಸಾವರಿಸುವ ರೀತಿ
ಪ್ರೇಮ ಸಿಂಧು.
ಬಿಂದು ಮಾಲಿನಿಯ
ಬಂಧನವು ಹಣೆಯ
ಹೆಣೆಯುತಿರಲದು
ಹಣೆಯಂತದಲಿ,
ಹಣೆಯೊಲುಮೆಯಾ
ಹಂದರದ ಹೂವಲಿ
ಸುಂದರ-ವಾಗುವುದು ಈ
ಕುಂದಣಾ ಕಲ್ಪವು.
ಸಿಂಗಾರಿಯವಳಿಗೆ
ಸಿಂಗಾರ ಸಂಗಮ
ಮುಂಜಾನೆ ರಂಗಿನಾ
ಮದರಂಗವು,
ಮುದಲೇಪದ ಪಥನ
ಮಧುಕರಿಯ ಮಿಲನ
ಮಧುಮಾಲೆಯಹುದು
ಹಣೆ ರಂಗಿನಲಿ.
ಸಂಗಮದಿ ಕರಗುವ
ಸೌಗಂಧದ ಸಾವರಿಕೆ
ಪಸರಿಕೆಯ ಪದಬಂಧ
ಪರಿಭ್ರಮಣ,
ತೇಲುವಾ ತವರಿಗೆ ಸೇರು ಸಿಂಧೂರ
ಸುಂದರಕೆ ಸೌಂದರ್ಯದ
ದೀಪರಂಗು!
ಅದುವೆ ಆ ದೀಪರಂಗು!
No comments:
Post a Comment