ಸುತ್ತ ಎತ್ತಲೂ ಬಯಲು
ನಡುವೆ ಮಾನವೀಯ - ನಾನು
ನನ್ನೊಡನಾಡಲು ವೃಕ್ಷವೊಂದು
ರೆಂಬೆ ಹರಡಿ ನಿಂತಿದೆ
ಕೆಳ ತಂಪು ಹಾಸು.
ಹಾದು ಹೋದವರಿಲ್ಲ
ಬಳಗದವರಿಲ್ಲ,
ಕೊಳಗ ನೀರಿಗಾದರೂ ಬೇಕು
ಆಕಾಶರಾಯನ ಕೃಪೆ.
ಜನ ಜಂಗುಳಿಯಿಲ್ಲಿಲ್ಲ
ಸ್ಮಶಾನ ಮೌನ, ಅದೇ ಸ್ನಾನ
ಅದೇ ನಿಸ್ವನ.
ಜನ ದೂರ ಇಹರು
ಜನ ಕ್ಷೋಭೆ ಇಲ್ಲ
ಮನ ನಲಿಸಿವ ಪ್ರೇಯಸಿಯರಿಲ್ಲ
ಪುತ್ರ ಕತೃಗಳೂ ಇಲ್ಲ.
ನಾನಾಯಿತು, ನನ್ನ ಮರ
ನನ್ನ ಈ ಎಲ್ಲೆ, ಈ ನನ್ನ ಭೂಮಿ.
ನಾ ಉಳಿಯುವುದಿಲ್ಲ, ನಾ ಬೆಳೆವುದಿಲ್ಲ
ಆಗಸದಾ ನೀರಿಗೆ ಬಾಯೊಡ್ಡುವೆ
ನನ್ನ ಮರದ ಫಲವ ಸ್ವೀಕರಿಸುವೆ
ಮನದಲಿ ನಾ ಮೆಲುಕ್ಹಾಕುವೆ.
ಪ್ರತಿ ಬಾರಿ ಸೂರ್ಯೋದಯವೂ
ಪ್ರತ್ಯುತ್ತರ ತರದ ಪ್ರಶ್ನೆ.
ಏನೋ ಕೊರತೆ, ಕಲೆತು, ಕೊಳೆತು
ಹಾದಿಯೆಲ್ಲಾ ವಾಸನೆ.
ಮನದಲಿ ಉರಿಯುವ ಬೆಂಕಿ
- ದಹನ.
ಹ್ಞಾ! ಗಾಳಿ ಬೀಸುತಿದೆ
ನನ್ನ ಮರ, ಪೋಷಾಕು ಅದಕೆ
- ತನ್ನ ಹೂವು.
ನಾ ಬೆತ್ತಲೆ!!
ಬೊಬ್ಬಿಡಲೆ, ಕಿರುಚಿಬಿಡಲೆ?
ದಿಗಂತದಲಿ ಯುವ ಜೋಡಿ!
ಶೃಂಗಾರ ಮಾಸ, ಮನಸಿನ ಹೊಸ
- ಹಾಸಿನಲಿ ತೇಲುತಿಹರು.
ಅರೆ! ಬೆಂಕಿಯಾ ಶಮನ
ಏನೋ ಸಂತಸ.
ತೊರೆದೆ, ಹೌದು ಹೋಗುತಿರುವೆ!
ಎಲ್ಲಿಗೆ? ಕಾಲ್ಗಳೇ ನಿಲ್ಲಿ!
ಇದಾವ ಪ್ರದೇಶ, ಬರೇ ಜನಗಳು
ಓ! ತಬ್ಬಿ ನಲಿಯುತಿಹರು.
ಸ್ವಾದನೆ, ಆಸ್ವಾದನೆ, ಕೈಗಳು -
ಅರೇ! ಏನೀ ಬಂಧನ!! ಯಾವುದೀಸೆರೆ.
ಯಾವುದೀ ತೆಕ್ಕೆ!
ಬಿಕ್ಕಳಿಕೆ, ಉಕ್ಕೇರುವ ಕಣ್ಣೀರು
ಹೊಸತನ, ಹೊಚ್ಚ ಹೊಸತನ;
ನನ್ನಲ್ಲೆ! ನನ್ನೊಳಗಿನ
ಅರೇ! ದಹನ!!
No comments:
Post a Comment