Sunday, June 3, 2012

ಸ್ಮರಣೆ


ಬೆರಳ ಬೆಸೆದು, ಒಲವ ಹೊಸೆದು
ಸೂರ್ಯ ಕಿರಣದ ಹಚ್ಚೆ ಬರೆದು
ಹಚ್ಚೆ ಹೂವಿನ ಕಂಪಿನೊಸಗೆ
ಎರೆದು ಬದುಕಿನ ಬರಹ ಪರಿಗೆ
ನಾನು ನಿನ್ನನೆ ಸ್ಮರಿಸುವಾಸೆಯ
ನವಿರ ಪುಳಕಕೆ ಏನ ಹೇಳಲಿ?

ನಲಿವ ಬಣ್ಣವ ಉಲಿವ ಕಣ್ಣಿನ
ಹನಿಯ ಸ್ಪರ್ಶದನುಭವದ ಮಾಯೆಯ
ಬಳುಕ ಬಳ್ಳಿಯ ನಲಿವಿನಪ್ಪುಗೆ
ಹಗುರವಾಗಿಸೆ ಜೀವದಳಲನೆ
ನಾನು ನಿನ್ನನೆ ಸ್ಮರಿಸುವಾಸೆಯ
ಮೆರೆವ ಸ್ಮರಣೆಗೆ ಏನ ಹೇಳಲಿ?

ಅಳಲ ಕಸಿದು, ಬೆಳಕ ಬಸಿದು
ಕಿರಣ ಹೂನಗೆ ಹೊನಲ ಬಳಿದು
ಬದುಕ ಮಾಯೆಯ ಅಣಿಯ ಅಂದಕೆ
ಮಧುರ ಪರಿಯ ಸಂಗೀತ ಮಿಶ್ರಿಸೆ
ನಾನು ನಿನ್ನನೆ ಸ್ಮರಿಸುವಾಸೆಯ
ಹರಿವ ಸಾರಕೆ ಏನ ಹೇಳಲಿ?

2 comments:

Anonymous said...

ಈ ಸ್ಮರಣೆ, ಕಾಲಮಿತಿಗೆ ಸಿಗದೆ ಅನಂತವಾಗಿರುತ್ತದೆ. ಇದು ಪ್ರೀತಿಯಲ್ಲ, ಸ್ನೇಹವೂ ಅಲ್ಲ, ಒಂದು ಅಪೂರ್ವ ಅನುಬಂಧವಿದ್ದೊಡೆ ಮಾತ್ರ ಅನುಭವಕ್ಕೆ ಬರುವಂತದ್ದು! ಸುಂದರ ಕವನಕ್ಕೆ ವಂದನೆಗಳು.

Pani Murthy said...

ಅನುಭವಕ್ಕೆ ಪದಗಳ ಹುಡುಕಿ ಕಾವ್ಯ ನಿರೂಪಿಸುವ ಕವಿಗೆ ಪದಗಳ ಸ್ಪಂದನದ ಪರಿಚಯವಿರಲಾರದು. ಆ ಪದಗಳ ಓದಿ ಸ್ಪಂದಿಸುವ ಓದುಗಾರ ಕವಿಗೆ ಜೀವವಿದ್ದ ಹಾಗೆ. ನಿಮ್ಮ ಅನಿಸಿಕೆಗಳು ಈ ಕವನಗಳಿಗೆ ಜೀವತುಂಬುತ್ತವೆ. ಇದಕ್ಕೆ ನನ್ನ ವಂದನೆಗಳು.